ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಬಹುಜನಸಮಾಜ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೋಲಿನ ಭಯಕಾ ಡಿದ್ದರಿಂದ ವಿವಿಧ ಪಕ್ಷಗಳೊಂದಿಗೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಕಳೆದ ೩೫ ವರ್ಷಗಳಿಂದ ರಾಜಕೀಯ ಆಂದೋಲನದಲ್ಲಿ ತಾವು ತೊಡಗಿಸಿಕೊಂಡಿದ್ದು, ರಾಜ್ಯ ಸಮಿತಿ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದರು.

ಚುನಾವಣೆಯಲ್ಲಿ ಗೆದ್ದೆಬಿಡುತ್ತೇವೆಂದು ಹೇಳುವುದಿಲ್ಲ ಗೆಲುವಿನ ಸಮೀಪಕ್ಕೆ ಹೋಗುತ್ತೇವೆ. ಬಿಜೆಪಿ ಮತ್ತು ಕಾಂಗ್ರೆಸ್ ಅಬ್ಬರದ ಪ್ರಚಾರ ಕೈಗೊಂಡಿವೆ. ನಾವುಗಳು ನೇರವಾಗಿ ಜನರ ಬಳಿಗೆ ತೆರಳಿ ಮತಯಾಚಿಸು ತ್ತಿದ್ದೇವೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳು ಸಿಕ್ಕಿರಲಿಲ್ಲ, ಬಿಜೆಪಿಯಲ್ಲಿದ್ದ ಜಯಪ್ರಕಾಶಹೆಗ್ಡೆಯವರನ್ನು ಕಾಂಗ್ರೆಸ್‌ಗೆ ಕರೆತರಲಾಗಿದೆ. ಕೇಂದ್ರ ಸಚಿವೆ ಯಾಗಿದ್ದ ಶೋಭಾಕರಂದ್ಲಾಜೆಯವರಿಗೆ ಗೋ ಬ್ಯಾಕ್ ಹೇಳಿದ ಮೇಲೆ ಆ ಪಕ್ಷದ ಮುಖಂಡರು ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸಪೂಜಾರಿಯವರನ್ನು ಬಲವಂತದಿಂದ ಕರೆ ತಂದು ಸ್ಪರ್ಧೆಗಿಳಿಸುವ ಮೂಲಕ ಹರಕೆಕುರಿಯನ್ನಾಗಿ ಮಾಡಲಿದ್ದಾರೆಂದು ಆರೋಪಿಸಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ನಗರದಲ್ಲಿ ಪಾದಯಾತ್ರೆ ನಡೆಸುವ ಮೂಲಕ ಮತಯಾಚಿಸಲಾಗುವುದು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಸಿ.ಸುಧಾ ಹೇಳಿದರು. ತಾಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟು ಎಂ.ಜಿ.ರಸ್ತೆ, ಐ.ಜಿ.ರಸ್ತೆ, ಅಂಬೇಡ್ಕರ್ ರಸ್ತೆಯಲ್ಲಿ ತೆರಳುತ್ತಿದ್ದು, ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ ಜಾಕಿರ್‌ಹುಸೇನ್, ಜಾಕಿರ್‌ಅಲಿಖಾನ್ ಆಗಮಿಸುವರೆಂದು ತಿಳಿಸಿದರು.

The Bahujan Samaj Party is contesting the elections independently