ಚಿಕ್ಕಮಗಳೂರು: ಜಿಲ್ಲೆಯ ಸಮಸ್ಯೆ ಕುರಿತು ಸಂಸತ್‌ನಲ್ಲಿ ಗಮನಸೆಳೆಯುವ ವ್ಯಕ್ತಿಯನ್ನು ಆಯ್ಕೆಮಾಡ ಬೇಕಾಗಿದೆ ಎಂದು ಮಾಜಿಶಾಸಕ, ಕೆಪಿಸಿಸಿ ವಕ್ತಾರ ಐವನ್‌ಡಿಸೋಜ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ, ಕಾಂಗ್ರೆಸ್ ಎಂದರೆ ಅಭಿವೃದ್ಧಿ,ಜನರಿಗೆ ರಕ್ಷಣೆ ನೀಡುವ ಪಕ್ಷವಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಜನರ ಒಲವಿದೆ ಎಂದು ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಕೊಟ್ಟಮಾತಿನಂತೆ ನಡೆದುಕೊಂಡಿದೆ. ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಅವುಗಳನ್ನು ಜನರಿಗೆ ತಲುಪಿಸಿದೆ.ಈ ಲೋಕಸಭಾ ಚುನಾವಣೆಯಲ್ಲಿ ೫ ನ್ಯಾಯಗಳನ್ನು ಜನರ ಮುಂದಿಟ್ಟಿದೆ. ದೇಶದಲ್ಲಿ ಅಧಿಕಾರಕ್ಕೆ ಬಂದರೆ ಅವುಗಳನ್ನು ಜಾರಿಗೆ ತರಲಾಗುತ್ತದೆ ಎಂದರು.

ಎರಡು ಬಾರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶೋಭಾಕರಂದ್ಲಾಜೆ ಜನರ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ, ಕೇಂದ್ರದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವೆಯಾಗಿದ್ದರೂ ಯಾವುದೇ ಯೋಜನೆಯನ್ನು ಕ್ಷೇತ್ರಕ್ಕೆ ತರಲಿಲ್ಲ ಹಾಗಾಗಿ ಸ್ವಪಕ್ಷೀಯವರಿಂದಲೇ ಗೋ ಬ್ಯಾಕ್ ಹೇಳಿಸಿಕೊಳ್ಳಬೇಕಾಯಿತು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯರಾಗಿ, ವಿಧಾನಪರಿಷತ್ ವಿರೋಧಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸಪೂಜಾರಿಯವರನ್ನು ಕರೆತಂದು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಮೂಲಕ ಅವರನ್ನು ಹರಕೆಕುಡಿಯನ್ನಾಗಿಸಲಿದ್ದಾರೆಂದು ಟೀಕಿಸಿದರು.

ಮೋದಿಯವರ ಆಡಳಿತದಲ್ಲಿ ಸಬ್‌ಕಾಸಾಥ್ ಸಬ್‌ಕಾವಿಕಾಸ್ ಆಗಲಿಲ್ಲ, ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕೇವಲ ಘೋಷಣೆಯಿಂದ ಜನರ ಹೊಟ್ಟೆ ತುಂಬುವುದಿಲ್ಲವೆಂಬ ಸತ್ಯವನ್ನು ಅವರು ಮನಗಾಣಬೇಕಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.

ಸಮಾಜದ ಎಲ್ಲಾ ವರ್ಗದ ಜನರ ಹಸಿವಿನ, ಮನೆಯ ಕಷ್ಟಗಳ ಬಗ್ಗೆ ತಿಳಿಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಹಿಳೆಯರ ಮನಸ್ಸಿಗೆ ನೋವಾಗುವ ಮಾತುಗಳನ್ನಾಡಿದ್ದಾರೆ. ಈ ರೀತಿಯ ಮಾತುಗಳನ್ನು ವಹಿಸಲಾಗದು ಎಂದರು.

ಮಾಜಿ ಶಾಸಕ ಲೋಬೊ ಮಾತನಾಡಿ, ರಾಷ್ಟ್ರಪತಿಗಳಾಗಿದ್ದ ಅಬ್ದುಲ್‌ಕಲಂ ಅವರು ದೇಶ ೨೦೨೫ಕ್ಕೆ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಬರಲಿದೆ ಎಂದು ಹೇಳಿದ್ದರು. ಆದರೆ ೫ನೇ ಸ್ಥಾನದಲ್ಲೇ ನಿಂತಿದೆ. ದೇಶದ ಯುವಕರು ಉದ್ಯೋಗ ಸಿಗದೆ ಒದ್ದಾಡುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ದೇಶದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.ಜೇಮ್ಸ್ ಡಿಸೋಜ, ನೆಲ್ವಿನ್, ಸಿಲ್ವಸ್ಟರ್ ರೂಬೆನ್‌ಮೊಸಸ್ ಇದ್ದರು.

A person needs to be selected to highlight the issue of the district in Parliament