ಚಿಕ್ಕಮಗಳೂರು: ಕೆಲವೇ ತಿಂಗಳುಗಳಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ನಡೆಯಲಿದ್ದು ನೋಂದಣಿ ಮಾಡಿಕೊಳ್ಳದ ಶಿಕ್ಷಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿ ತಮಗಿರುವ ಹಕ್ಕನ್ನು ಚಲಾಯಿಸಿ ಶಿಕ್ಷಣ ಮತ್ತು ಶಿಕ್ಷಕರ ಕ್ಷೇತ್ರವನ್ನು ಸದೃಢಗೊಳಿಸಬೇಕೆಂದು ನೈರುತ್ಯ ಶೀಕ್ಷಣ ಕ್ಷೇತ್ರದ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿ ನಂಜೇಶ್ ಬೆಣ್ಣೂರು ತಿಳಿಸಿದರು.

ಈ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು ನೈರುತ್ಯ ಶಿಕ್ಷಣ ಕ್ಷೇತ್ರದ ಚುನಾವಣೆಯಲ್ಲಿ ಕೇವಲ ಸರ್ಕಾರಿ ಶಾಲಾ ಶಿಕ್ಷಕರು ಮಾತ್ರ ಮತ ಚಲಾಯಿಸಬಹುದೆಂಬ ತಪ್ಪು ಕಲ್ಪನೆಯಿದ್ದು ಇದಕ್ಕಾಗಿ ಶಿಕ್ಷಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಕಳೆದ ೬ ವರ್ಷದಲ್ಲಿ ಕನಿಷ್ಠ ೩ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ಪ್ರಾದ್ಯಾಪಕರಾಗಿ, ಸಹಪ್ರಾದ್ಯಾಪಕರಾಗಿ, ಸಹಾಯಕ ಪ್ರಾದ್ಯಾಪಕರಾಗಿ ಸೇವೆಸಲ್ಲಿಸಿರುತ್ತಾರೊ ಅಥವಾ ಸಲ್ಲಿಸುತ್ತಿದ್ದಾರೊ ಅವರು ಮತ ಚಲಾಯಿಸಬಹುದಾಗಿದ್ದು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹೊರತು ಪಡಿಸಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ (ಅನುದಾನ ರಹಿತ / ಸಹಿತ ) ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಖಾಯಂ, ಅಥಿತಿ ಅಥವಾ ನಿವೃತ್ತ ವರ್ಗದ ಎಲ್ಲಾ ಶಿಕ್ಷಕರು ಮತ ಚಲಾಯಿಸಬಹುದಾಗಿದ್ದು ಇಂಜಿನಿಯರಿಂಗ್, ಮೆಡಿಕಲ್, ನರ್ಸಿಂಗ್ ಹಾಗೂ ಬಹುತೇಹ ಉನ್ನತ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಯ ಬಹುತೇಕರು ಈ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ, ಅವರೂ ಕೂಡ ತಮ್ಮ ಮತದಾನದ ಹಕ್ಕು ಚಲಾಯಿಸಿ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸಹಕರಿಸುವಂತೆ ಕರೆ ನೀಡಿದರು.

ಶಿಕ್ಷಕರ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು ಚುನಾವಣಾ ಆಯೋಗವು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದಾಗ ಅದರಲ್ಲಿ ಪ್ರದೇಶವಾರು ಇ.ಆರ್.ಒ ಗಳ ಮಾಹಿತಿ ನೀಡಲಾಗುವುದು ಆನಂತರದಲ್ಲಿ ಪಾರಂ ನಂ.೧೯ ಅನ್ನು ಭರ್ತಿ ಮಾಡಿ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದಕ್ಕೆ ಪುರಾವೆಯಾಗಿ ಎಕ್ಸ್‌ಪೀರಿಯನ್ಸ್ ಲೆಟರ್‌ನೊಂದಿಗೆ ನನ್ನನ್ನು ಸಂಪರ್ಕಿಸಿದರೆ ತಮ್ಮ ಹೆಸರನ್ನು ಶಿಕ್ಷಕರ ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಮಾಡುತ್ತೇನೆ ಎಂದರು.

ಶಿಕ್ಷಕನಾಗಿ ೧೦ವರ್ಷ ಸೇವೆ ಸಲ್ಲಿಸಿದ ನನಗೆ ಶಿಕ್ಷಕರ ಕಷ್ಟಗಳನ್ನು ಬಹು ಆಳದಿಂದ ಅರಿತಿದ್ದು ರಾಜಕೀಯದ ಮೂಲಕ ಶಿಕ್ಷಕ ವೃಂದಕ್ಕೆ ಸೇವೆ ಸಲ್ಲಿಸಲು ಅವಕಾಶವನ್ನು ಬಯಸುತ್ತಿದ್ದೇನೆ, ಮುಂಬರುವ ನೈರುತ್ತ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ಅಕಾಂಕ್ಷಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿಸಲ್ಲಿಸಿದ್ದು, ವರಿಷ್ಠರು ಟಿಕೆಟ್ ನೀಡುವ ವಿಶ್ವಾಸವಿದೆ. ಪ್ರತಿಯೊಬ್ಬ ಶಿಕ್ಷಕರು ಮುಂಬರುವ ಚುನಾವಣೆಯಲ್ಲಿ ನನಗೆ ಬೆಂಬಲಿಸಿ ಶಿಕ್ಷಕ ವೃಂದಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಲು ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

Petition for inclusion of teacher’s name in South West Teachers’ Electoral Roll